ಚಿತ್ರದುರ್ಗ: ಅಚ್ಚುಕಟ್ಟು ಪ್ರದೇಶದಲ್ಲಿರುವ ಹಳ್ಳಗಳಲ್ಲಿ ನೀರಿಲ್ಲದೇ ನಮ್ಮೂರ ಕೆರೆ ತುಂಬುತ್ತಿಲ್ಲ, ಪರಿಣಾಮ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತಿದೆ. ಕೃಷಿ ಬದುಕು ಕುಂಟುತ್ತಾ ಸಾಗಿದೆ!
ಜಂಪಣ್ಣನಾಯಕನ ಕೋಟೆಯ(ಜೆಎನ್ ಕೋಟೆ) ಗ್ರಾಮಸ್ಥರು, ತಮ್ಮೂರಿನ ಕೆರೆಗೆ ನೀರು ಹರಿಯದಿರುವ ಕುರಿತು ಹೀಗೆ ಬೇಸರದಿಂದ ವಿವರಿಸುತ್ತಾರೆ.
ಸುಮಾರು ಹತ್ತು ವರ್ಷಗಳಿಂದ ಕೆರೆಗೆ ಸರಿಯಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ಕೆರೆಯನ್ನೇ ನಂಬಿಕೊಂಡಿರುವ ಸುತ್ತಲಿನ ಹತ್ತು ಹದಿನೈದು ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ. ಕುಡಿಯಲು ಶುದ್ಧ ನೀರಿಲ್ಲ. ಕೃಷಿ ಚಟುವಟಿಕೆಗಳ ಪರಿಸ್ಥಿತಿಯಂತೂ ಹೇಳತೀರದು.
ಜೆಎನ್ ಕೋಟೆ ಕೆರೆ ಇತಿಹಾಸ: 135 ಹೆಕ್ಟೇರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜೆಎನ್ ಕೋಟೆ ಕೆರೆಗೆ ರೈತರ ಪ್ರಕಾರ 300 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕುರುಮರಡಿಕೆರೆ ತುಂಬಿ ಕೋಡಿ, ನರೇನಾಳ್ ಗ್ರಾಮ ವ್ಯಾಪ್ತಿಯ ಎತ್ತರ ಪ್ರದೇಶಗಳೇ ಕೆರೆ ಅಚ್ಚುಕಟ್ಟು ಪ್ರದೇಶ. ಕುರುಮರಡಿಕೆರೆ ಕೆರೆ ತುಂಬಿ ಹರಿದರೆ, ಆ ನೀರು ಹಳ್ಳದ ರೂಪದಲ್ಲಿ ಪಾಲನಹಳ್ಳಿ, ರಾಷ್ಟ್ರೀಯ ಹೆದ್ದಾರಿ ದಾಟಿ, ಕ್ಯಾದಿಗ್ಗೆರೆ ಆಸುಪಾಸಿನಲ್ಲಿ ಹರಿಯುತ್ತಾ ಜೆಎನ್ ಕೋಟೆ ಸೇರುವ ವ್ಯವಸ್ಥೆ ಇದೆ.
1985-86ರಕ್ಕೆ ಮುನ್ನ ಮಳೆಗಾಲ ಉತ್ತಮವಾಗಿತ್ತು. ಪ್ರತಿ ವರ್ಷ ಕೆರೆ ತುಂಬುತ್ತಿತ್ತು. ತೆಂಗು, ಭತ್ತ, ತರಕಾರಿ, ಹೂವು ಎಲ್ಲ ಸಮೃದ್ಧವಾಗಿತ್ತು. 86ರನಂತರ ಮಳೆ ಕ್ಷೀಣಿಸಿತು. ಕೊಳವೆಬಾವಿಗಳು ಹೆಚ್ಚಾದವು. ಅಂತರ್ಜಲ ಕುಸಿಯಲಾರಂಭಿಸಿತು. ಆದರೂ ಮಳೆಗಾಲದಲ್ಲಿ ಕೆರೆ ತುಂಬಿರುತ್ತಿತ್ತು. ‘15 ವರ್ಷಗಳ ಹಿಂದೆ ಕೆರೆ ಕೋಡಿಬಿದ್ದಿದ್ದು ನೆನಪಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕ್ವಾರಿಯಾಗುವ ಮುಂಚೆಯೂ ಕೆರೆ ತುಂಬುತ್ತಿತ್ತು. ಆದರೆ ಕ್ವಾರಿ ನಡೆದು ಬೃಹತ್ ಕೆರೆಗಳು ನಿರ್ಮಾಣವಾಗಿ, ಸುತ್ತಲಿನ ಜಮೀನಿನವರು ಹಳ್ಳದ ನೀರನ್ನು ಕ್ವಾರಿಗೆ ತಿರುಗಿಸಲು ಶುರು ಮಾಡಿದ ಮೇಲೆ, ಕೆರೆಗೆ ಮಳೆ ನೀರು ಹರಿಯುವುದೇ ನಿಂತುಹೋಯಿತು’ ಎನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ್.
ಶ್ರಮದಾನದಿಂದ ಹಳ್ಳ ದುರಸ್ತಿ: ಅಚ್ಚುಕಟ್ಟು ಪ್ರದೇಶ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಿಗೆ ಸೇರುತ್ತದೆ. ಹೀಗೆ ಹಳ್ಳಗಳು ಒತ್ತುವರಿಯಾಗಿ, ನೀರನ್ನು ಕ್ವಾರಿಗೆ ತಿರುಗಿಸುವುದು ಗೊತ್ತಾದ ಮೇಲೆ ಗ್ರಾಮಸ್ಥರೆಲ್ಲ ಎರಡು ತಾಲ್ಲೂಕಿನ ತಹಶೀಲ್ದಾರರಿಗೆ ದೂರು ನೀಡಿ, ಸಮೀಕ್ಷೆ ನಡೆಸಿ ಹಳ್ಳಗಳನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಜೆಎನ್ ಕೋಟೆ ಗ್ರಾಮಸ್ಥರೆಲ್ಲ ಹಳ್ಳ ಸರಿಪಡಿಸಲು ಪ್ರಯತ್ನಿಸಿ ಸುತ್ತಲಿನ ಜಮೀನಿನವರ ವಿರೋಧಕ್ಕೂ ಗುರಿಯಾಗಿದ್ದಾರೆ. ಹಳ್ಳಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದಾರೆ. ಇದಾವುದೂ ಸಾಧ್ಯವಾಗದಿದ್ದಾಗ, ಸ್ವತಃ ಗ್ರಾಮಸ್ಥರೆಲ್ಲ ಸೇರಿ ನಾಲ್ಕು ದಿನ ಶ್ರಮದಾನ ಮಾಡಿ, ಲಕ್ಷದವರೆಗೂ ಹಣ ಖರ್ಚು ಮಾಡಿ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿದ್ದಾರೆ. ಆದರೂ ಇದು ತಾತ್ಕಾಲಿಕ ರಚನೆಯಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಬಹುದು. ಶಾಶ್ವತ ತಡೆಗೋಡೆ ಬೇಕು ಎನ್ನುತ್ತಾರೆ ಗ್ರಾಮಸ್ಥರು
ಸರ್ವೆ ಮಾಡಿಸಿ, ಹಳ್ಳ ಗುರುತಿಸಿ: ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಹಳ್ಳಗಳಿವೆ. ಒಂದು ಹಳ್ಳದ ನೀರನ್ನು ಜಮೀನಿನ ರೈತರು ಕ್ವಾರಿಯ ಹೊಂಡಕ್ಕೆ ತಿರುವುತ್ತಾರೆ. ಮತ್ತೊಂದು ಹಳ್ಳಕ್ಕೆ ತಡೆ ಹಾಕುತ್ತಾರೆ. ಪ್ರಶ್ನಿಸಿದರೆ, ‘ಇಲ್ಲಿ ಹಳ್ಳವೇ ಇಲ್ಲ’ ಎಂದು ವಾದಿಸುತ್ತಾರೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಏರಿ, ತಹಶೀಲ್ದಾರ್ ವರೆಗೂ ಹೋಗಿ ಸ್ಥಳ ಪರಿಶೀಲನೆಯಾಗಿದೆ. ಅಧಿಕಾರಿಗಳು, ಸಮೀಕ್ಷೆ ಮೂಲಕ ಕಾಲುವೆ ಗುರುತಿಸಬೇಕು ಎಂದಿದ್ದಾರೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಹೇಳಿದ ಅವರು, ಹಳ್ಳ ಗುರುತಿಸಿ ನಕ್ಷೆ ಮಾಡಿಸಿದರೆ ಸಾಕು, ಮುಂದಿನ ಕೆಲಸ ಬೇರೆ ಇಲಾಖೆಯವರು ಮಾಡುತ್ತಾರೆ’ ಎಂದು ಗ್ರಾಮದ ಜಯಕುಮಾರ್, ಸಿ.ಎಸ್.ಗೌಡ್ರು ಅಭಿಪ್ರಾಯಪಡುತ್ತಾರೆ.
ಹಳ್ಳಗಳು ಸರಿ ಹೋದರೆ: ಹಳ್ಳಗಳಿಂದ ನೀರು ಕ್ವಾರಿಗೆ ಹರಿಯದಂತೆ ತಡೆಗೋಡೆ ಮಾಡಿಸಿ, ತಡೆ ಮಾಡಿರುವ ಹಳ್ಳಗಳನ್ನು ಸರಿಪಡಿಸಿದರೆ, ಜೆಎನ್ ಕೋಟೆ ಕೆರೆಗೆ ಸರಾಗವಾಗಿ ಮಳೆ ನೀರು ಹರಿಯುತ್ತದೆ. ಕನಿಷ್ಠ 15 ರಿಂದ 20 ಹಳ್ಳಿಯವರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಫ್ಲೋರೈಡ್ ಸಮಸ್ಯೆ ಕಡಿಮೆಯಾಗುತ್ತದೆ. ‘ಕೆರೆಯಲ್ಲಿ ನೀರು ನಿಂತರೆ, ಸುತ್ತಲಿನ ಕೊಳವೆಬಾವಿಗಳು ಮರುಪೂರಣ ಆಗುತ್ತವೆ. ಕೊಳವೆಬಾವಿಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ. ಹಳ್ಳಗಳು ಸರಿಯಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ’ ಎಂಬುದು ಗ್ರಾಮದ ಜಯಕುಮಾರ್ ಅವರ ಅಭಿಪ್ರಾಯ.