ಹಳ್ಳ ದುರಸ್ತಿಯಾದರೆ ಕೆರೆ ತುಂಬಿ ಹರಿಯುವುದು


ಚಿತ್ರದುರ್ಗ: ಅಚ್ಚುಕಟ್ಟು ಪ್ರದೇಶದಲ್ಲಿರುವ ಹಳ್ಳಗಳಲ್ಲಿ ನೀರಿಲ್ಲದೇ ನಮ್ಮೂರ ಕೆರೆ ತುಂಬುತ್ತಿಲ್ಲ, ಪರಿಣಾಮ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತಿದೆ. ಕೃಷಿ ಬದುಕು ಕುಂಟುತ್ತಾ ಸಾಗಿದೆ!
17ct-jnkote2
ಜಂಪಣ್ಣನಾಯಕನ ಕೋಟೆಯ(ಜೆಎನ್ ಕೋಟೆ) ಗ್ರಾಮಸ್ಥರು, ತಮ್ಮೂರಿನ ಕೆರೆಗೆ ನೀರು ಹರಿಯದಿರುವ ಕುರಿತು ಹೀಗೆ ಬೇಸರದಿಂದ ವಿವರಿಸುತ್ತಾರೆ.

ಸುಮಾರು ಹತ್ತು ವರ್ಷಗಳಿಂದ ಕೆರೆಗೆ ಸರಿಯಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ಕೆರೆಯನ್ನೇ ನಂಬಿಕೊಂಡಿರುವ ಸುತ್ತಲಿನ ಹತ್ತು ಹದಿನೈದು ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ. ಕುಡಿಯಲು ಶುದ್ಧ ನೀರಿಲ್ಲ. ಕೃಷಿ ಚಟುವಟಿಕೆಗಳ ಪರಿಸ್ಥಿತಿಯಂತೂ ಹೇಳತೀರದು.

ಜೆಎನ್ ಕೋಟೆ ಕೆರೆ ಇತಿಹಾಸ: 135 ಹೆಕ್ಟೇರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜೆಎನ್ ಕೋಟೆ ಕೆರೆಗೆ ರೈತರ ಪ್ರಕಾರ 300 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕುರುಮರಡಿಕೆರೆ ತುಂಬಿ ಕೋಡಿ, ನರೇನಾಳ್ ಗ್ರಾಮ ವ್ಯಾಪ್ತಿಯ ಎತ್ತರ ಪ್ರದೇಶಗಳೇ ಕೆರೆ ಅಚ್ಚುಕಟ್ಟು ಪ್ರದೇಶ. ಕುರುಮರಡಿಕೆರೆ ಕೆರೆ ತುಂಬಿ ಹರಿದರೆ, ಆ ನೀರು ಹಳ್ಳದ ರೂಪದಲ್ಲಿ ಪಾಲನಹಳ್ಳಿ, ರಾಷ್ಟ್ರೀಯ ಹೆದ್ದಾರಿ ದಾಟಿ, ಕ್ಯಾದಿಗ್ಗೆರೆ ಆಸುಪಾಸಿನಲ್ಲಿ ಹರಿಯುತ್ತಾ ಜೆಎನ್ ಕೋಟೆ ಸೇರುವ ವ್ಯವಸ್ಥೆ ಇದೆ.

1985-86ರಕ್ಕೆ ಮುನ್ನ ಮಳೆಗಾಲ ಉತ್ತಮವಾಗಿತ್ತು. ಪ್ರತಿ ವರ್ಷ ಕೆರೆ ತುಂಬುತ್ತಿತ್ತು. ತೆಂಗು, ಭತ್ತ, ತರಕಾರಿ, ಹೂವು ಎಲ್ಲ ಸಮೃದ್ಧವಾಗಿತ್ತು. 86ರನಂತರ ಮಳೆ ಕ್ಷೀಣಿಸಿತು. ಕೊಳವೆಬಾವಿಗಳು ಹೆಚ್ಚಾದವು. ಅಂತರ್ಜಲ ಕುಸಿಯಲಾರಂಭಿಸಿತು. ಆದರೂ ಮಳೆಗಾಲದಲ್ಲಿ ಕೆರೆ ತುಂಬಿರುತ್ತಿತ್ತು. ‘15 ವರ್ಷಗಳ ಹಿಂದೆ ಕೆರೆ ಕೋಡಿಬಿದ್ದಿದ್ದು ನೆನಪಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕ್ವಾರಿಯಾಗುವ ಮುಂಚೆಯೂ ಕೆರೆ ತುಂಬುತ್ತಿತ್ತು. ಆದರೆ ಕ್ವಾರಿ ನಡೆದು ಬೃಹತ್ ಕೆರೆಗಳು ನಿರ್ಮಾಣವಾಗಿ, ಸುತ್ತಲಿನ ಜಮೀನಿನವರು ಹಳ್ಳದ ನೀರನ್ನು ಕ್ವಾರಿಗೆ ತಿರುಗಿಸಲು ಶುರು ಮಾಡಿದ ಮೇಲೆ, ಕೆರೆಗೆ ಮಳೆ ನೀರು ಹರಿಯುವುದೇ ನಿಂತುಹೋಯಿತು’ ಎನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ್.

ಶ್ರಮದಾನದಿಂದ ಹಳ್ಳ ದುರಸ್ತಿ: ಅಚ್ಚುಕಟ್ಟು ಪ್ರದೇಶ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಿಗೆ ಸೇರುತ್ತದೆ. ಹೀಗೆ ಹಳ್ಳಗಳು ಒತ್ತುವರಿಯಾಗಿ, ನೀರನ್ನು ಕ್ವಾರಿಗೆ ತಿರುಗಿಸುವುದು ಗೊತ್ತಾದ ಮೇಲೆ ಗ್ರಾಮಸ್ಥರೆಲ್ಲ ಎರಡು ತಾಲ್ಲೂಕಿನ ತಹಶೀಲ್ದಾರರಿಗೆ ದೂರು ನೀಡಿ, ಸಮೀಕ್ಷೆ ನಡೆಸಿ ಹಳ್ಳಗಳನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ.

ಈ ನಡುವೆ ಜೆಎನ್ ಕೋಟೆ ಗ್ರಾಮಸ್ಥರೆಲ್ಲ ಹಳ್ಳ ಸರಿಪಡಿಸಲು ಪ್ರಯತ್ನಿಸಿ ಸುತ್ತಲಿನ ಜಮೀನಿನವರ ವಿರೋಧಕ್ಕೂ ಗುರಿಯಾಗಿದ್ದಾರೆ. ಹಳ್ಳಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದಾರೆ. ಇದಾವುದೂ ಸಾಧ್ಯವಾಗದಿದ್ದಾಗ, ಸ್ವತಃ ಗ್ರಾಮಸ್ಥರೆಲ್ಲ ಸೇರಿ ನಾಲ್ಕು ದಿನ ಶ್ರಮದಾನ ಮಾಡಿ, ಲಕ್ಷದವರೆಗೂ ಹಣ ಖರ್ಚು ಮಾಡಿ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿದ್ದಾರೆ. ಆದರೂ ಇದು ತಾತ್ಕಾಲಿಕ ರಚನೆಯಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಬಹುದು. ಶಾಶ್ವತ ತಡೆಗೋಡೆ ಬೇಕು ಎನ್ನುತ್ತಾರೆ ಗ್ರಾಮಸ್ಥರು

ಸರ್ವೆ ಮಾಡಿಸಿ, ಹಳ್ಳ ಗುರುತಿಸಿ: ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಹಳ್ಳಗಳಿವೆ. ಒಂದು ಹಳ್ಳದ ನೀರನ್ನು ಜಮೀನಿನ ರೈತರು ಕ್ವಾರಿಯ ಹೊಂಡಕ್ಕೆ ತಿರುವುತ್ತಾರೆ. ಮತ್ತೊಂದು ಹಳ್ಳಕ್ಕೆ ತಡೆ ಹಾಕುತ್ತಾರೆ. ಪ್ರಶ್ನಿಸಿದರೆ, ‘ಇಲ್ಲಿ ಹಳ್ಳವೇ ಇಲ್ಲ’ ಎಂದು ವಾದಿಸುತ್ತಾರೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಏರಿ, ತಹಶೀಲ್ದಾರ್ ವರೆಗೂ ಹೋಗಿ ಸ್ಥಳ ಪರಿಶೀಲನೆಯಾಗಿದೆ. ಅಧಿಕಾರಿಗಳು, ಸಮೀಕ್ಷೆ ಮೂಲಕ ಕಾಲುವೆ ಗುರುತಿಸಬೇಕು ಎಂದಿದ್ದಾರೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಹೇಳಿದ ಅವರು, ಹಳ್ಳ ಗುರುತಿಸಿ ನಕ್ಷೆ ಮಾಡಿಸಿದರೆ ಸಾಕು, ಮುಂದಿನ ಕೆಲಸ ಬೇರೆ ಇಲಾಖೆಯವರು ಮಾಡುತ್ತಾರೆ’ ಎಂದು ಗ್ರಾಮದ ಜಯಕುಮಾರ್, ಸಿ.ಎಸ್.ಗೌಡ್ರು ಅಭಿಪ್ರಾಯಪಡುತ್ತಾರೆ.

ಹಳ್ಳಗಳು ಸರಿ ಹೋದರೆ: ಹಳ್ಳಗಳಿಂದ ನೀರು ಕ್ವಾರಿಗೆ ಹರಿಯದಂತೆ ತಡೆಗೋಡೆ ಮಾಡಿಸಿ, ತಡೆ ಮಾಡಿರುವ ಹಳ್ಳಗಳನ್ನು ಸರಿಪಡಿಸಿದರೆ, ಜೆಎನ್ ಕೋಟೆ ಕೆರೆಗೆ ಸರಾಗವಾಗಿ ಮಳೆ ನೀರು ಹರಿಯುತ್ತದೆ. ಕನಿಷ್ಠ 15 ರಿಂದ 20 ಹಳ್ಳಿಯವರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಫ್ಲೋರೈಡ್ ಸಮಸ್ಯೆ ಕಡಿಮೆಯಾಗುತ್ತದೆ. ‘ಕೆರೆಯಲ್ಲಿ ನೀರು ನಿಂತರೆ, ಸುತ್ತಲಿನ ಕೊಳವೆಬಾವಿಗಳು ಮರುಪೂರಣ ಆಗುತ್ತವೆ. ಕೊಳವೆಬಾವಿಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ. ಹಳ್ಳಗಳು ಸರಿಯಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ’ ಎಂಬುದು ಗ್ರಾಮದ ಜಯಕುಮಾರ್ ಅವರ ಅಭಿಪ್ರಾಯ.

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮ ಟಿಪ್ಪಣಿ ಬರೆಯಿರಿ