‘ಕೆರೆ ತುಂಬಿದರೆ, ಮತ್ತೆ ಆಲೆಮನೆ ಹಾಕ್ತೀವಿ’

‘ನಮ್ಮೂರು ಕೆರೆ ತುಂಬಿದರೆ ಸುತ್ತ ಇಪ್ಪತ್ತೈದು ಬಾವಿಗಳಲ್ಲಿ ಸದಾ ನೀರು ಜಿನುಗುತ್ತಿತ್ತು. ಗದ್ದೆಯಲ್ಲಿ ಭತ್ತದ ಪೈರು, ಪಕ್ಕದಲ್ಲಿ ಕಬ್ಬಿನ ಬೆಳೆ, ಸಮೀಪದಲ್ಲೇ ಆಲೆಮನೆ ಹಾಕಿ ಹುಂರ್ಗಡಿ ಬೆಲ್ಲ ಮಾಡ್ತಿದ್ವಿ. ಇದು ಕಥೆ ಅಲ್ಲ, 35 ವರ್ಷಗಳ ಹಿಂದೆ ಊರಲ್ಲಿ ಹಿಂಗೇ ನಡೀತಿತ್ತು. ಇವತ್ತಿಗೂ ನಮ್ಮೂರಲ್ಲಿ ಅಂದು ಕಬ್ಬು ಬೆಳೆದವರು, ಬೆಲ್ಲ ಮಾಡ್ದವರು ಇದ್ದಾರೆ…’

ತಾಲ್ಲೂಕಿನ ಭರಮಸಗಾರ ಸಮೀಪದ ಎಮ್ಮೆಹಟ್ಟಿ ಕೆರೆಯ ಇತಿಹಾಸವನ್ನು ಊರಿನ ಹಿರಿಯ ಸುಂಕದಕಲ್ಲು ತಿಪ್ಪಣ್ಣ ಹಂಪಿಯ ಗತವೈಭವದಂತೆ ಮೆಲುಕು ಹಾಕುತ್ತಾರೆ. ಆದರೆ, 90ರ ದಶಕದಿಂ­ದೀ­ಚೆಗೆ ಕೆರೆಗೆ ನೀರು ಹರಿಯುವುದು ಕಡಿಮೆಯಾದ ಮೇಲೆ, ಬಾವಿಗಳು ಮುಚ್ಚಿಹೋಗಿವೆ. ಕಬ್ಬು, ಭತ್ತ, ಶೇಂಗಾ, ಜೋಳದ ಕೃಷಿ ನಿಂತು ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಸದ್ಯ ಈಗ ಎಮ್ಮೆಹಟ್ಟಿಯಲ್ಲಿ ಕೊಳವೆಬಾವಿಗಳ ಆಶ್ರಯದಲ್ಲಿ ಸೊಪ್ಪು, ತರಕಾರಿ, ಎಲೆಬಳ್ಳಿ, ಮುಸುಕಿನ ಜೋಳ ಬೆಳೆಯುತ್ತಿರುವುದನ್ನು ಅವರು ಉಲ್ಲೇಖಿಸುತ್ತಾರೆ.

ಚಿಕ್ಕ ಕೆರೆ, ಚೊಕ್ಕ ಅಚ್ಚುಕಟ್ಟು: ಭರಮಸಾಗರದಿಂದ ನಾಲ್ಕು ಕಿ.ಮೀ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಎಮ್ಮೆಹಟ್ಟಿ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯದ ವಿಸ್ತೀರ್ಣ 66 ಎಕರೆ. ಅಚ್ಚುಕಟ್ಟು ಪ್ರದೇಶ ಕೂಡ 75 ರಿಂದ 80 ಎಕರೆ. ನೀರ್ಥಡಿ ಬೆಟ್ಟ ಪ್ರದೇಶ, ಹಂಪನೂರು, ಹಳುವದರ ಸೇರಿದಂತೆ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಗಳೇ ಈ ಕೆರೆಯ ಅಚ್ಚುಕಟ್ಟು ಪ್ರದೇಶ. ಅಲ್ಲಿ ಮಳೆ ಸುರಿದರೆ, ಈ ಕೆರೆಗೆ ಹಳ್ಳಗಳ ರೂಪದಲ್ಲಿ ನೀರು ಹರಿಯುತ್ತದೆ. ಈ ಕೆರೆ ತುಂಬಿ ಕೋಡಿ ಹರಿದರೆ, ಮುಂದೆ ಪಳಗೆರೆಕೆರೆ­(ಬೇವಿನಹಳ್ಳಿ), ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತದೆ. ಸುತ್ತಲಿನ ನಾಲ್ಕೈದು ಹಳ್ಳಿಗಳ ಅಂತರ್ಜಲ ಹೆಚ್ಚಾಗುತ್ತದೆ.

ಇತ್ತೀಚೆಗೆ ಕೆರೆ ತುಂಬಿಲ್ಲ : 1992 ಮತ್ತು 2000ನೇ ವರ್ಷದಲ್ಲಿ ಶೇ 80­ರಷ್ಟು ಕೆರೆ ತುಂಬಿತ್ತು. ಆದರೆ ಕೋಡಿ ಹರಿದಿರಲಿಲ್ಲ. ಇದನ್ನು ಹೊರತುಪಡಿಸಿ, ಕೆರೆ ತುಂಬಿದ್ದನ್ನು ಕಂಡಿಲ್ಲ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ. ಕೆರೆಗೆ ಮಳೆ ನೀರು ಹರಿಯುವ ಹಂಪನೂರು, ನೀರ್ಥಡಿ ಕಡೆಯ ಹಳ್ಳಗಳು ಒತ್ತುವರಿಯಾಗಿದ್ದು, ನೀರ್ಥಡಿ ಕಡೆಯಿಂದ ಕೆರೆಗೆ ನೀರು ಹರಿಸಲು ನಿರ್ಮಿಸಬೇಕಿದ್ದ ಫೀಡರ್ ಚಾನೆಲ್ ಅರ್ಧಕ್ಕೆ ನಿಂತಿದ್ದರಿಂದ, ಕೆರೆಗೆ ಸಮರ್ಪಕವಾಗಿ ಮಳೆ ನೀರು ಸೇರುವುದಿಲ್ಲ ಎನ್ನುತ್ತಾರೆ ಅವರು.

ಹೀಗೆ ಒಂದು ಕಡೆ ಮಳೆಯ ಪ್ರಮಾಣದಲ್ಲಿ ಏರುಪೇರು, ಮತ್ತೊಂದು ಕಡೆ ಸುರಿವ ಮಳೆ ನೀರು ಸರಿಯಾಗಿ ಕೆರೆ ಸೇರದ ಪರಿಣಾಮ, ಪ್ರತಿ ಮಳೆಗಾಲದಲ್ಲಿ ಎಷ್ಟು ಜೋರು ಮಳೆ ಸುರಿದರೂ, ಕೆರೆ ಭರ್ತಿಯಾಗುತ್ತಿಲ್ಲ.

ಕೆರೆ ನಿರ್ವಹಣೆ ಕೊರತೆ: ಎಮ್ಮೆಹಟ್ಟಿ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇಂಥದ್ದೊಂದು ವಾರಸುದಾರಿಕೆ ಹೊರತುಪಡಿಸಿದರೆ ಇಲಾಖೆಯಿಂದ ಕೆರೆ ನಿರ್ವಹಣೆ ಮಾಡಿದ ಉದಾಹರಣೆಗಳು ಇಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾ­ಣದ ವೇಳೆ ಕೆರೆಗೆ ನೀರು ಹರಿಯುವ ದಾರಿಯನ್ನು ಕದಲಿಸಿದ್ದರಿಂದ, ಮಳೆ ನೀರು ಕೆರೆ ಸೇರುತ್ತಿಲ್ಲ. ಇನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರ್ವೀಸ್ ರಸ್ತೆ ನಿರ್ಮಿಸುವಾಗ ಕೆರೆ ಅಂಗಳದ ಮೂರ್ನಾಲ್ಕು ಎಕರೆಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವೂ ಕಡಿಮೆಯಾಗಿದೆ. ಸರ್ವೀಸ್ ರಸ್ತೆ ಮಾಡಿದ ಮೇಲಾದರೂ, ಕೆರೆಗೆ ಮಳೆ ನೀರು ಹರಿಯುವ ಕಾಲುವೆಗಳನ್ನು ಮಾಡಿಕೊಡಲಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಕೆರೆಗೆ ನೀರು ತುಂಬಬೇಕಾದರೆ: ಕೆರೆಗೆ ಮಳೆ ನೀರು ಹರಿಯಬೇಕಾದರೆ ಹಂಪನೂರು ಫೀಡರ್ ಚಾನೆಲ್ ಕಾಮಗಾರಿ ಪೂರ್ಣ­ಗೊಳ್ಳ­ಬೇಕು. ಗ್ರಾಮದ ಮೇಲೆ ಹಾಗೂ ರಸ್ತೆಯ ಮೇಲೆ ಸುರಿಯ ಮಳೆ ನೀರು ಕೆರೆಗೆ ಸೇರುವಂತೆ ಹೆದ್ದಾರಿ ಪ್ರಾಧಿಕಾರದವರು ಕಾಲುವೆಗಳನ್ನು ನಿರ್ಮಿಸಬೇಕು. ಆಗ ಕೆರೆ ಮೊದಲಿನಂತಾಗುತ್ತದೆ.

ಕೆರೆಗೆ ನೀರು ಹರಿದರೆ, ಮತ್ತೆ ಎಮ್ಮೆಹಟ್ಟಿ ಗ್ರಾಮದ ಸುತ್ತ, ಕಬ್ಬು, ಭತ್ತ, ಶೇಂಗಾ ಕೃಷಿ ಗರಿಗೆದರುತ್ತದೆ. ಮತ್ತೆ ಆಲೆಮನೆ ವೈಭವ ಶುರುವಾಗಿ, ಹುಂಡಿ ಬೆಲ್ಲದ ತಯಾರಿಕೆಯನ್ನೂ ಕಾಣಬಹುದು ಎಂದು ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಕೆಂಚ ಯಲಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಈಶ್ವರಪ್ಪ, ರಂಗನಾಥ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹಳ್ಳ ದುರಸ್ತಿಯಾದರೆ ಕೆರೆ ತುಂಬಿ ಹರಿಯುವುದು

ಚಿತ್ರದುರ್ಗ: ಅಚ್ಚುಕಟ್ಟು ಪ್ರದೇಶದಲ್ಲಿರುವ ಹಳ್ಳಗಳಲ್ಲಿ ನೀರಿಲ್ಲದೇ ನಮ್ಮೂರ ಕೆರೆ ತುಂಬುತ್ತಿಲ್ಲ, ಪರಿಣಾಮ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತಿದೆ. ಕೃಷಿ ಬದುಕು ಕುಂಟುತ್ತಾ ಸಾಗಿದೆ!
17ct-jnkote2
ಜಂಪಣ್ಣನಾಯಕನ ಕೋಟೆಯ(ಜೆಎನ್ ಕೋಟೆ) ಗ್ರಾಮಸ್ಥರು, ತಮ್ಮೂರಿನ ಕೆರೆಗೆ ನೀರು ಹರಿಯದಿರುವ ಕುರಿತು ಹೀಗೆ ಬೇಸರದಿಂದ ವಿವರಿಸುತ್ತಾರೆ.

ಸುಮಾರು ಹತ್ತು ವರ್ಷಗಳಿಂದ ಕೆರೆಗೆ ಸರಿಯಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ಕೆರೆಯನ್ನೇ ನಂಬಿಕೊಂಡಿರುವ ಸುತ್ತಲಿನ ಹತ್ತು ಹದಿನೈದು ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ. ಕುಡಿಯಲು ಶುದ್ಧ ನೀರಿಲ್ಲ. ಕೃಷಿ ಚಟುವಟಿಕೆಗಳ ಪರಿಸ್ಥಿತಿಯಂತೂ ಹೇಳತೀರದು.

ಜೆಎನ್ ಕೋಟೆ ಕೆರೆ ಇತಿಹಾಸ: 135 ಹೆಕ್ಟೇರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜೆಎನ್ ಕೋಟೆ ಕೆರೆಗೆ ರೈತರ ಪ್ರಕಾರ 300 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕುರುಮರಡಿಕೆರೆ ತುಂಬಿ ಕೋಡಿ, ನರೇನಾಳ್ ಗ್ರಾಮ ವ್ಯಾಪ್ತಿಯ ಎತ್ತರ ಪ್ರದೇಶಗಳೇ ಕೆರೆ ಅಚ್ಚುಕಟ್ಟು ಪ್ರದೇಶ. ಕುರುಮರಡಿಕೆರೆ ಕೆರೆ ತುಂಬಿ ಹರಿದರೆ, ಆ ನೀರು ಹಳ್ಳದ ರೂಪದಲ್ಲಿ ಪಾಲನಹಳ್ಳಿ, ರಾಷ್ಟ್ರೀಯ ಹೆದ್ದಾರಿ ದಾಟಿ, ಕ್ಯಾದಿಗ್ಗೆರೆ ಆಸುಪಾಸಿನಲ್ಲಿ ಹರಿಯುತ್ತಾ ಜೆಎನ್ ಕೋಟೆ ಸೇರುವ ವ್ಯವಸ್ಥೆ ಇದೆ.

1985-86ರಕ್ಕೆ ಮುನ್ನ ಮಳೆಗಾಲ ಉತ್ತಮವಾಗಿತ್ತು. ಪ್ರತಿ ವರ್ಷ ಕೆರೆ ತುಂಬುತ್ತಿತ್ತು. ತೆಂಗು, ಭತ್ತ, ತರಕಾರಿ, ಹೂವು ಎಲ್ಲ ಸಮೃದ್ಧವಾಗಿತ್ತು. 86ರನಂತರ ಮಳೆ ಕ್ಷೀಣಿಸಿತು. ಕೊಳವೆಬಾವಿಗಳು ಹೆಚ್ಚಾದವು. ಅಂತರ್ಜಲ ಕುಸಿಯಲಾರಂಭಿಸಿತು. ಆದರೂ ಮಳೆಗಾಲದಲ್ಲಿ ಕೆರೆ ತುಂಬಿರುತ್ತಿತ್ತು. ‘15 ವರ್ಷಗಳ ಹಿಂದೆ ಕೆರೆ ಕೋಡಿಬಿದ್ದಿದ್ದು ನೆನಪಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕ್ವಾರಿಯಾಗುವ ಮುಂಚೆಯೂ ಕೆರೆ ತುಂಬುತ್ತಿತ್ತು. ಆದರೆ ಕ್ವಾರಿ ನಡೆದು ಬೃಹತ್ ಕೆರೆಗಳು ನಿರ್ಮಾಣವಾಗಿ, ಸುತ್ತಲಿನ ಜಮೀನಿನವರು ಹಳ್ಳದ ನೀರನ್ನು ಕ್ವಾರಿಗೆ ತಿರುಗಿಸಲು ಶುರು ಮಾಡಿದ ಮೇಲೆ, ಕೆರೆಗೆ ಮಳೆ ನೀರು ಹರಿಯುವುದೇ ನಿಂತುಹೋಯಿತು’ ಎನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ್.

ಶ್ರಮದಾನದಿಂದ ಹಳ್ಳ ದುರಸ್ತಿ: ಅಚ್ಚುಕಟ್ಟು ಪ್ರದೇಶ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಿಗೆ ಸೇರುತ್ತದೆ. ಹೀಗೆ ಹಳ್ಳಗಳು ಒತ್ತುವರಿಯಾಗಿ, ನೀರನ್ನು ಕ್ವಾರಿಗೆ ತಿರುಗಿಸುವುದು ಗೊತ್ತಾದ ಮೇಲೆ ಗ್ರಾಮಸ್ಥರೆಲ್ಲ ಎರಡು ತಾಲ್ಲೂಕಿನ ತಹಶೀಲ್ದಾರರಿಗೆ ದೂರು ನೀಡಿ, ಸಮೀಕ್ಷೆ ನಡೆಸಿ ಹಳ್ಳಗಳನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ.

ಈ ನಡುವೆ ಜೆಎನ್ ಕೋಟೆ ಗ್ರಾಮಸ್ಥರೆಲ್ಲ ಹಳ್ಳ ಸರಿಪಡಿಸಲು ಪ್ರಯತ್ನಿಸಿ ಸುತ್ತಲಿನ ಜಮೀನಿನವರ ವಿರೋಧಕ್ಕೂ ಗುರಿಯಾಗಿದ್ದಾರೆ. ಹಳ್ಳಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದಾರೆ. ಇದಾವುದೂ ಸಾಧ್ಯವಾಗದಿದ್ದಾಗ, ಸ್ವತಃ ಗ್ರಾಮಸ್ಥರೆಲ್ಲ ಸೇರಿ ನಾಲ್ಕು ದಿನ ಶ್ರಮದಾನ ಮಾಡಿ, ಲಕ್ಷದವರೆಗೂ ಹಣ ಖರ್ಚು ಮಾಡಿ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿದ್ದಾರೆ. ಆದರೂ ಇದು ತಾತ್ಕಾಲಿಕ ರಚನೆಯಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಬಹುದು. ಶಾಶ್ವತ ತಡೆಗೋಡೆ ಬೇಕು ಎನ್ನುತ್ತಾರೆ ಗ್ರಾಮಸ್ಥರು

ಸರ್ವೆ ಮಾಡಿಸಿ, ಹಳ್ಳ ಗುರುತಿಸಿ: ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಹಳ್ಳಗಳಿವೆ. ಒಂದು ಹಳ್ಳದ ನೀರನ್ನು ಜಮೀನಿನ ರೈತರು ಕ್ವಾರಿಯ ಹೊಂಡಕ್ಕೆ ತಿರುವುತ್ತಾರೆ. ಮತ್ತೊಂದು ಹಳ್ಳಕ್ಕೆ ತಡೆ ಹಾಕುತ್ತಾರೆ. ಪ್ರಶ್ನಿಸಿದರೆ, ‘ಇಲ್ಲಿ ಹಳ್ಳವೇ ಇಲ್ಲ’ ಎಂದು ವಾದಿಸುತ್ತಾರೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಏರಿ, ತಹಶೀಲ್ದಾರ್ ವರೆಗೂ ಹೋಗಿ ಸ್ಥಳ ಪರಿಶೀಲನೆಯಾಗಿದೆ. ಅಧಿಕಾರಿಗಳು, ಸಮೀಕ್ಷೆ ಮೂಲಕ ಕಾಲುವೆ ಗುರುತಿಸಬೇಕು ಎಂದಿದ್ದಾರೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಹೇಳಿದ ಅವರು, ಹಳ್ಳ ಗುರುತಿಸಿ ನಕ್ಷೆ ಮಾಡಿಸಿದರೆ ಸಾಕು, ಮುಂದಿನ ಕೆಲಸ ಬೇರೆ ಇಲಾಖೆಯವರು ಮಾಡುತ್ತಾರೆ’ ಎಂದು ಗ್ರಾಮದ ಜಯಕುಮಾರ್, ಸಿ.ಎಸ್.ಗೌಡ್ರು ಅಭಿಪ್ರಾಯಪಡುತ್ತಾರೆ.

ಹಳ್ಳಗಳು ಸರಿ ಹೋದರೆ: ಹಳ್ಳಗಳಿಂದ ನೀರು ಕ್ವಾರಿಗೆ ಹರಿಯದಂತೆ ತಡೆಗೋಡೆ ಮಾಡಿಸಿ, ತಡೆ ಮಾಡಿರುವ ಹಳ್ಳಗಳನ್ನು ಸರಿಪಡಿಸಿದರೆ, ಜೆಎನ್ ಕೋಟೆ ಕೆರೆಗೆ ಸರಾಗವಾಗಿ ಮಳೆ ನೀರು ಹರಿಯುತ್ತದೆ. ಕನಿಷ್ಠ 15 ರಿಂದ 20 ಹಳ್ಳಿಯವರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಫ್ಲೋರೈಡ್ ಸಮಸ್ಯೆ ಕಡಿಮೆಯಾಗುತ್ತದೆ. ‘ಕೆರೆಯಲ್ಲಿ ನೀರು ನಿಂತರೆ, ಸುತ್ತಲಿನ ಕೊಳವೆಬಾವಿಗಳು ಮರುಪೂರಣ ಆಗುತ್ತವೆ. ಕೊಳವೆಬಾವಿಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ. ಹಳ್ಳಗಳು ಸರಿಯಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ’ ಎಂಬುದು ಗ್ರಾಮದ ಜಯಕುಮಾರ್ ಅವರ ಅಭಿಪ್ರಾಯ.

ನಾರಿ ಸುವರ್ಣ ಕುರಿ ತಳಿ

ಚಿತ್ರದುರ್ಗ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯದ ಮೂರು ಜಿಲ್ಲೆಗಳ 15 ರೈತರಿಗೆ ಅವಳಿ ಮರಿ ಸಂತಾ ನದ ನಾರಿ ಸುವರ್ಣ ಹೊಸ ಕುರಿ ತಳಿ ನೀಡಲಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಕುರಿಗಳಿರುವ ತುಮಕೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ತಲಾ ಐದು ಗ್ರಾಮಗಳ ರೈತರಿಗೆ ಹೊಸ ತಳಿಗಳ ಕುರಿ ಮರಿ ವಿತರಿಸಲಾಗಿದೆ.

ಪ್ರಾಯೋಗಿಕ ಯೋಜನೆ : ಏಳು ತಿಂಗಳ ಹಿಂದೆ ಮೂರು ಜಿಲ್ಲೆಗಳ  ಪಶುವೈದ್ಯಾಧಿ ಕಾರಿಗಳ ತಂಡವೊಂದು ಮಹಾ ರಾಷ್ಟ್ರದ ಸತಾರ ಜಿಲ್ಲೆಯ ಪಲ್ಟಾನ ಗ್ರಾಮಕ್ಕೆ ಎರಡು ದಿನಗಳ ಭೇಟಿ ನೀಡಿ ‘ನಾರಿ ಸುವರ್ಣ ತಳಿ’ ಕುರಿತು ಮಾಹಿತಿ ಸಂಗ್ರಹಿ ಸಿದೆ. ನಂತರ ಕುರಿ ಮತ್ತು ಉಣ್ಣೆ ಅಭಿ ವೃದ್ಧಿ ನಿಗಮ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಈ ಹೊಸ ತಳಿಯ ಕುರಿ ಮರಿಗಳನ್ನು ಖರೀದಿಸಿ ಮೂರು ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮದಕರಿಪುರ, ಕಕ್ಕೆಹರವು, ವಿಜಾಪುರ ಸಮೀಪದ ಕಿಟ್ಟದಹಳ್ಳಿ, ಕೋಡಯ್ಯನ ಹಟ್ಟಿ ಮತ್ತು ಬಚ್ಚಬೋರಯ್ಯನ­ಹಟ್ಟಿಯಲ್ಲಿ ಆಯ್ದ ಫಲಾನುಭವಿಗಳಿಗೆ ಈ ತಳಿಗಳನ್ನು ನೀಡಲಾಗಿದೆ.

ಫಲಾನುಭವಿಗಳಿಗೆ ತರಬೇತಿ : ಪಲ್ಟಾನ ಗ್ರಾಮದ ನಿಂಬ್ಕರ್ ಕೃಷಿ ಸಂಶೋಧನಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆಯ ತಜ್ಞರು ಈ ಕುರಿ ತಳಿ ಅಭಿವೃದ್ಧಿಪಡಿಸಿ ದ್ದಾರೆ. ‘ಪಶ್ಚಿಮ ಬಂಗಾಳದ ಸುಂದರ ಬನ್ ಪ್ರದೇಶದ ‘ಗೆರೋಲ್’ ಎಂಬ ಅವಳಿ ಮರಿ ಸಂತಾನದ ಕುರಿತ ತಳಿಯ ವಂಶವಾಹಿನಿಯನ್ನು (ಜೀನೊ ಟೈಪ್) ಸಾಮಾನ್ಯ ಕುರಿ ತಳಿಗೆ ಸೇರಿಸಿ ನಾರಿ ಸುವರ್ಣ ತಳಿ ಅಭಿವೃದ್ಧಿಪಡಿಸಲಾಗಿದೆ’ ಎಂದು ತಾಲ್ಲೂಕಿನ ಪಶು ವೈದ್ಯಾಧಿಕಾರಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

‘ಸದ್ಯ ಹೊಸ ಕುರಿ ತಳಿಯನ್ನು ಜಿಲ್ಲೆಯ ಐವರು ರೈತರಿಗೆ ವಿತರಿಸಿದ್ದೇವೆ. ಕುರಿ ತಳಿ ವಿತರಣೆಗೂ ಮುನ್ನ ಕುರಿಸಾಕಾ ಣೆದಾರರನ್ನು ಪಲ್ಟಾನ ಗ್ರಾಮಕ್ಕೆ ಕರೆದೊಯ್ದು, ನಾರಿ ಸುವರ್ಣ ಕುರಿ ತಳಿಯ ಸಾಕಾಣಿಕೆ, ಆಹಾರ, ಪೋಷಣೆ, ನಿರ್ವ ಹಣೆ ಕುರಿತು ತರಬೇತಿ ನೀಡಲಾಗಿದೆ’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲೆಯ ಸಹಾಯಕ ನಿರ್ದೇಶ ಡಾ. ಬಿ.ವಿ.ಪ್ರತಾಪ್ ರೆಡ್ಡಿ ವಿವರಿಸಿದರು.

ಒಣಹವೆಗೆ ಒಗ್ಗುವ ತಳಿ : ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸತಾರ ಜಿಲ್ಲೆಯ ಹವಾಮಾನ ಒಂದೇ ರೀತಿ ಇದ್ದು, ಒಣಹವೆಗೆ ಹೊಂದಿಕೊಂಡು ಬೆಳೆಯುತ್ತವೆ. ಪ್ರಾಯೋಗಿಕ ಯೋಜನೆ­ಯಾಗಿ­ರು­ವುದ ರಿಂದ, ಸದ್ಯಕ್ಕೆ ಕುರಿಗಾಹಿಗಳಿಗೆ ಈ ಕುರಿ ಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇಯಿಸು ವಂತೆ ತರಬೇತಿ ನೀಡಿದ್ದೇವೆ. ಆರು ತಿಂಗ ಳಲ್ಲಿ ಈ ಕುರಿಗಳು ಮರಿ ಹಾಕಲಿದ್ದು, ಫಲಿ ತಾಂಶ ಆಧರಿಸಿ ಮಂದೆ ಯಲ್ಲಿ ಬಿಟ್ಟು ಮೇಯಿಸಲು ಸೂಚಿಸಲಾಗುತ್ತದೆ’ ಎಂದು ಡಾ.ಪ್ರಸನ್ನ ವಿವರಿಸಿದರು.

ಇದು ಯೋಜನೆಯ ಪ್ರಥಮ ಹಂತವಾಗಿದೆ. ಈಗ ಫಲಾನುಭವಿಗಳಿಗೆ ನೀಡಿರುವ ಕುರಿಗಳು ಮುಂದಿನ ಆರೇಳು ತಿಂಗಳಲ್ಲಿ ಮರಿ ಹಾಕಲಿವೆ. ಈ ಪ್ರಯೋಗದ ಫಲಿತಾಂಶ ಆಧರಿಸಿ, ನಾರಿ ಸುವರ್ಣ ತಳಿಯನ್ನು ರಾಜ್ಯದಾದ್ಯಂತ ವಿಸ್ತರಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ನಿಷ್ಕ್ರಿಯ ಕೊಳವೆಬಾವಿಗಳಿಗೆ ಜಲಮರುಪೂರಣ

ಚಿತ್ರದುರ್ಗಜಿಲ್ಲೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳಿಗೆ ಜಲ­ಮರು­ಪೂರಣ (ಮಳೆ ನೀರು ರೀಚಾರ್ಜ್) ವಿಧಾನ ಅಳವಡಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ಮುಂದಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ಎಂಎನ್ಆರ್ಇಜಿ) ನಿಷ್ಕ್ರಿಯ ಕೊಳವೆ­ಬಾವಿ­ಗಳಿಗೆ ಜಲಮರುಪೂರಣ ವಿಧಾನ ಅಳವಡಿಸುವ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿದೆ.

ಆರಂಭದಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಿಂದ 10 ಕೊಳವೆಬಾವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಮೊದಲ ಹಂತವಾಗಿ ಒಂದಷ್ಟು ಮಾದರಿಗಳನ್ನು ಸಿದ್ಧಪಡಿಸಿ, ಅದರಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ಉಳಿದ ಕೊಳವೆಬಾವಿಗಳಿಗೂ ಈ ವಿಧಾನ ಅಳವಡಿಸಲು ನಿರ್ಧರಿಸಲಾಗಿದೆ.

ತರಬೇತಿ, ಕಾರ್ಯಾಗಾರ : ಜಲಮರುಪೂರಣ ಯೋಜನೆ ಆರಂಭಕ್ಕೆ ಮುನ್ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಈ ಯೋಜನೆ ನಿರ್ವಹಿಸುವ ತಂಡದವರಿಗೆ ಕಾರ್ಯಾಗಾರ ನಡೆಸಿ, ಜಲಮರುಪೂರಣ ಕಾಮಗಾರಿ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಒಂದೊಂದು ಮಾದರಿ ಸಿದ್ಧಪಡಿಸಲು ಜಿಲ್ಲಾ ಪಂಚಾಯ್ತಿ ಸಿಇಒ ಸೂಚಿಸಿದ್ದಾರೆ. ಅದರಂತೆ ಚಿತ್ರದುರ್ಗ ತಾಲ್ಲೂಕು ದೊಡ್ಡ­ಸಿದ್ದವ್ವನ­ಹಳ್ಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಕೊಳವೆಬಾವಿ ಸಿದ್ಧವಾಗಿದೆ.

ಏನಿದು ಜಲಮರುಪೂರಣ?: ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳನ್ನು ಜಲಮರುಪೂರಣ ಕಾರ್ಯಕ್ಕಾಗಿ ಆಯ್ಕೆ ಮಾಡಿ­ಕೊಳ್ಳ­­ಲಾಗುತ್ತಿದೆ. ತಾಂತ್ರಿಕ ವಿಭಾಗದವರ ನಿರ್ದೇಶನದಂತೆ ಕೊಳವೆಬಾವಿ ಸುತ್ತ ಇಪ್ಪತ್ತು ಅಡಿ ಆಳದ ಗುಂಡಿ ತೆಗೆದು, ಸುತ್ತ ದಪ್ಪ ಕಲ್ಲು, ವಿವಿಧ ಗಾತ್ರಗಳ ಜಲ್ಲಿ, ಮರಳು ತುಂಬಿಸ­ಲಾ­ಗು­ತ್ತಿದೆ. ಕೊಳವೆಬಾವಿ ಸಮೀಪ­ದಲ್ಲಿ ಇಳಿಜಾರು ಪ್ರದೇಶವನ್ನು ಗುರುತಿಸಿ, ಅಲ್ಲಿಂದ ಮಳೆ ನೀರು ಜಲಮರುಪೂರಣ ರಚನೆಯತ್ತ ಹರಿದುಬರುವಂತೆ ಮಾಡಲಾಗುತ್ತಿದೆ.

‘ಭವಿಷ್ಯದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸುವುದು ಕಡಿಮೆಯಾಗಬೇಕು. ಇರುವ ಕೊಳವೆಬಾವಿಗಳಿಗೆ ಮರುಜೀವ ತುಂಬಬೇಕು. ಪರಿಸರ ರಕ್ಷಿಸಬೇಕೆಂಬ ಉದ್ದೇಶದೊಂದಿಗೆ ನಿಷ್ಕ್ರಿಯ ಕೊಳವೆ ಬಾವಿಗಳನ್ನೇ ಜಲಮರುಪೂರಣ ವಿಧಾನ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಮಂಜುಶ್ರೀ.

ಎಲ್ಲ ತಾಲ್ಲೂಕುಗಳಲ್ಲೂ…
ವೇದಾವತಿ ನದಿ ಪುನಶ್ಚೇತನ ಕಾರ್ಯ ನಡೆಯುತ್ತಿರುವ ಹೊಸದುರ್ಗ ತಾಲ್ಲೂಕು ಹೊರತುಪಡಿಸಿ, ಉಳಿದ ಐದು ತಾಲ್ಲೂಕುಗಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಕೊಳವೆಬಾವಿ ಕೈಗೆತ್ತಿಕೊಳ್ಳಲಾಗುತ್ತಿದೆ. ವೇದಾವತಿ ನದಿ ಪುನಶ್ಚೇತನ ಯೋಜನೆಯಲ್ಲೂ ಜಲಮರುಪೂರಣ ವಿಧಾನ ಅಳವಡಿಕೆಗೆ ಅವಕಾಶವಿರುವುದರಿಂದ ಹೊಸದುರ್ಗ ತಾಲ್ಲೂಕಿನಲ್ಲಿ 5 ಕೊಳವೆ ಬಾವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂದು ಸಿಇಒ ಮಂಜುಶ್ರೀ ಅವರು ಸ್ಪಷ್ಟಪಡಿಸಿದರು.

ಬಜೆಟ್‌ಗೆ ಅನುಮೋದನೆ ಸಿಕ್ಕಿಲ್ಲ
ಪ್ರತಿ ಕೊಳವೆಬಾವಿಗೆ ಜಲಮರುಪೂರಣ ವಿಧಾನ ಅಳವಡಿಸಲು (ಎರಡು ವಿಧಾನಗಳಲ್ಲಿ) ₨ 63 ರಿಂದ ₨ 68 ಸಾವಿರದಷ್ಟು ವೆಚ್ಚವಾಗಬಹುದು ಎಂದು ಎಂಜಿನಿಯರಿಂಗ್ ವಿಭಾಗದವರು ಅಂದಾಜು ವೆಚ್ಚ ನೀಡಿದ್ದಾರೆ. ವೇದಾವತಿ ನದಿ ಪುನಶ್ಚೇತನ ಯೋಜನೆಯಲ್ಲೂ ಈ ಕಾರ್ಯಕ್ಕಾಗಿ ₨ 65 ಸಾವಿರ ನಿಗದಿಪಡಿ­ಸಲಾ­ಗಿದೆ. ಸದ್ಯ ಈ ಯೋಜನೆಯ ಪ್ರಸ್ತಾವನೆಯನ್ನು ಆರ್‌ಡಿಪಿಆರ್‌ಗೆ ಕಳಿಸಿದ್ದೇವೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೆ, ಇದು ಕಳೆದ ವರ್ಷವೇ ಆಗಬೇಕಾದ ಕೆಲಸವಾಗಿದ್ದರಿಂದ, ಈ ವರ್ಷದ ಮಳೆಗಾಲದ ಒಳಗೆ ಆಗಲಿ ಎಂದು ಕಾಮಗಾರಿ ಶುರು ಮಾಡಿಸಿರುವುದಾಗಿ ಮಂಜುಶ್ರೀ ವಿವರಿಸಿದರು.

‘ಈ ಯೋಜನೆ ರಾಜ್ಯದೆಲ್ಲೆಡೆ ಚಾಲ್ತಿಯಲ್ಲಿರುವ ಕುರಿತು ಮಾಹಿತಿ ಇಲ್ಲ. ಆದರೆ, ಚಿತ್ರದುರ್ಗ­ದಂತಹ ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಈ ವಿಧಾನ ಅನಿವಾರ್ಯ. ಆದ್ದರಿಂದ ಮಳೆಗಾಲಕ್ಕೆ ಮುನ್ನವೇ ಕಾಮಗಾರಿಗೆ ಚಾಲನೆ ನೀಡಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಮಕ್ಕಳ ಆಟವೋ… ಸಂವಹನದ ಪಾಠವೋ…

ನನ್ನ ಮಕ್ಕಳು ನದಿ, ಅಗರ್ತ ಮನೆಯಂಗಳದಲ್ಲಿ ಆಟವಾಡುತ್ತಿದ್ದರು.
ನದಿ, ‘ಅವಲಕ್ಕಿ ಪವಲಕ್ಕಿ ಕಾಂಚಣ, ಮಿಣ ಮಿಣ, ಡಾಂ ಡೂ, ಕೊಂಯ್ ಕೊಟಾರ್ ‘ ಅಂತ ಹೇಳ್ತಾ ಹೇಳ್ತಾ… ಇದಕ್ಕಿದ್ದಂತೆ “ಪಿಜ್ಜಾ ಲೈಕ್ ಫಿಜ್ಜಾ, ಪಿಜ್ಜಾ ಮೈ ಫೇವರೇಟ್ ಅಂತ…’ ಅಂತ ಮಧ್ಯೆ ಸೇರಿಸಿದ್ದಳು.
‘ಅವಲಕ್ಕಿ ಮಧ್ಯೆ ಪಿಜ್ಜಾ ಏಕೆ’ ಅಂತ ಕೇಳಿದೆ. ಅದಕ್ಕೆ ಅವಳು ಹೇಳ್ತಾಳೆ..’ಅವಲಕ್ಕಿ- ಪವಲಕ್ಕಿಯ’ ಇಂಗ್ಲಿಷ್ ವರ್ಷನ್ ಅಪ್ಪಾ ಇದು.. ಎಂದು ಸಮರ್ಥನೆ ಕೊಟ್ಟಳು !
ಆಟ ಮುಂದುವರಿಯುತು..
ಕೈ ಎಲ್ಲ ಎಲ್ಲಿ ಹೋಯ್ತ ಅಂತ ಆಟ ಶುರು ಮಾಡಿದಳು ನದಿ. ಅದಕ್ಕೆ ಅಗರ್ತ ‘ಕೈ ಎಲ್ಲೂ ಹೋಗಿಲ್ಲ, ಇಲ್ಲೆ ಇವೆ ನೋಡೇ..’ ಎನ್ನುತ್ತಾ ಬೆನ್ನ ಹಿಂದೆ ಮಡಿಸಿದ್ದ ಕೈಗಳನ್ನು ತೋರಿಸಿದ. ಆದರೂ ಅವರ ಅಕ್ಕ ಅವನನ್ನು ಒಪ್ಪಿಸಿ, ನೋಡು “ಕೈ ಎಲ್ಲ ಸಂತೆಗೆ ಹೋಯ್ತು” ಅಂತ ಹೇಳ್ಬೇಕು ಎಂದಳು. ಸರಿ, ಅದಕ್ಕೆ ಹೇಗೋ ಅವನು ಸಮ್ಮತಿಸಿದ.
ಮುಂದಿನ ಪ್ರಶ್ನೆ, ಸಂತೆಯಿಂದ ಏನ್ ತಂತು ?’ ಅಂತ ಕೇಳಿದಳು. ಅದಕ್ಕೆ ಅವನು ಪ್ರತಿಕ್ರಿಯಿಸಲಿಲ್ಲ.
ಮಗಳು ‘ಸ್ವಗತ ‘ದ ರೀತಿಯಲ್ಲಿ ‘ಬಾಳೆ ಹಣ್ಣು ತಂತು’ ಎಂದಳು.
‘ಹೋಗ್ಲಿ, ಬಾಳೆ ಹಣ್ಣು ಏನ್ಮಾಡದೇ’ ಅಂತ ಕೇಳಿದಳು, ಅದಕ್ಕೆ ಅಗರ್ತ ಥಟ್ಟನೆ ‘ತಿಂದೆ ಕಣೇ’ ಅಂತ ಕೂಗಿದ.
ಸರಿ, ಸಿಪ್ಪೆ ಏನ್ಮಾಡಿದೆಯೋ ಅಗರ್ತ ಎಂದಳು? ‘ಏನ್ಮಾಡ್ತಾರೆ, ಆ ಡಸ್ಟ್ ಬಿನ್ ಗೆ ಹಾಕ್ದೆ’ ಅಂತ ತೋರಿಸಿದ.
ಇಲ್ಲಿ ನದಿಗೆ ಈ ಆಟದ ಟ್ರ್ಯಾಕ್ ತಪ್ಪಿತು. ಅಯ್ಯೋ ಬಾಗಿಲು ಹಿಂದೆ ಹಾಕ್ಬೇಕಲ್ಲವಾ ? ಇವನು ತಪ್ಪು ಹೇಳ್ತಿದ್ದಾನೆ ಅಂತ ಜಗಳಮಾಡಿದಳು. ಅದಕ್ಕೆ ಅಗರ್ತ ಒಪ್ಪಲೇ ಇಲ್ಲ.
ಸರಿ, ಆಮೇಲೆ ಏನ್ಮಾಡಿದೆ ? ‘ಅಂತ ಕೇಳಿದಳು..
ಡಸ್ಟ್ ಬಿನ್ ತಗೊಂಡು ಹೋಗಿ ಕಸದವನಿಗೆ ಹಾಕ್ದೆ…’ ಎಂದ ಅಗರ್ತ.
ನದಿಗೆ, ಈ ಆಟದಲ್ಲಿ ಬಾಗಿಲು, ತಿಪ್ಪೆ, ಗೊಬ್ಬರ, ಬತ್ತ, ಎಲ್ಲ ಮಿಸ್ ಆಗ್ತಿದೆ ಅಂತ. ಆದರೆ ಅಗರ್ತನಿಗೆ ಅದೆಲ್ಲ ಗೊತ್ತಿಲ್ಲ. ಅವನಿಗೆ ಬಾಳೆ ಹಣ್ಣಿನ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕಿಯೇ ಗೊತ್ತು !
ಮಕ್ಕಳ ಈ ಸಂವಹನದಲ್ಲಿ ನನಗನ್ನಿಸಿತು, ‘ನಾವು ಮಕ್ಕಳಿಗೆ ಕಲಿಸಬೇಕಾದದ್ದು, ಕಲಿಯಬೇಕಾದದ್ದು ಎಷ್ಟೆಲ್ಲ ಇದೆ’ ಎಂದು.

ನಾವು ಆಡುತ್ತಿದ್ದ ಆಟದಲ್ಲಿ ಹಣ್ಣು, ಸಿಪ್ಪೆ, ಗೊಬ್ಬರ, ಬೂದಿ, ಗಿಡ, ಮರ.. ಹೀಗೆ, ಇಡೀ ಪ್ರಕೃತಿಯೊಳಗಿನ ಋತುಚಕ್ರವೇ ಅನಾವರಣಗೊಳ್ಳುತ್ತಿತ್ತು. ಈ ಮೂಲಕವೇ ಮಕ್ಕಳ ಬುದ್ದಿ ಶಕ್ತಿ, ನೆನಪಿನ ಶಕ್ತಿ ಹೆಚ್ಚಾಗುತ್ತಿತ್ತು. ಅದೇ ನಿಜವಾದ ರೈಮಿಂಗ್ ವರ್ಡ್ಸ್ ಆಗಿತ್ತು..!
ನಮ್ ರೈಮಿಂಗ್ ಹಿಂಗಿತ್ತು ಅಲ್ವಾ ?
ಕೈಯೆಲ್ಲ ಎಲ್ಲಿ ಹೋಯ್ತು ?
ಸಂತೆಗೆ ಹೋಯ್ತು
ಸಂತೆಯಿಂದ ಏನ್ ತಂತು ?
ಬಾಳೆ ಹಣ್ಣು ತಂತು.
ಬಾಳೆಹಣ್ಣು ಏನ್ಮಾಡ್ದೆ ?
ಸುಲಿದು ತಿಂದೆ
ಸಿಪ್ಪೆ ಏನ್ಮಾಡ್ದೆ ?
ಕದಿನಿಂದಕ್ಕೆ ಹಾಕ್ದೆ (ಬಾಗಿಲು ಹಿಂದಕ್ಕೆ)
ಕದ ಏನ್ ಕೊಡ್ತು ?
ಚೆಕ್ಕೆ ಕೊಡ್ತು .
ಚೆಕ್ಕೆ ಏನ್ ಮಾಡ್ದೆ ?
ಒಲೆಗೆ ಹಾಕ್ದೆ.
ಒಲೆ ಏನ್ ಕೊಡ್ತು ?
ಬೂದಿ ಕೊಡ್ತು
ಬೂದಿ ಏನ್ ಮಾಡ್ದೆ ?
ತಿಪ್ಪೆಗೆ ಹಾಕ್ದೆ .
ತಿಪ್ಪೆ ಏನ್ ಕೊಡ್ತು ?
ಗೊಬ್ಬರ ಕೊಡ್ತು.
ಗೊಬ್ಬರ ಏನ್ಮಾಡ್ದೆ?
ಗದ್ದೆಗೆ ಹಾಕ್ದೆ.
ಗದ್ದೆ ಏನ್ ಕೊಡ್ತು ?
ಭತ್ತ ಕೊಡ್ತು
ಭತ್ತ ಏನ್ ಮಾಡ್ದೆ?
ಅಕ್ಕಿ ಮಾಡ್ದೆ
ಅಕ್ಕಿ ಏನ್ ಕೊಡ್ತು ?
ಅನ್ನ ಕೊಡ್ತು
ಅನ್ನ ಏನ್ ಮಾಡ್ದೆ ?
ತಿಂದೆ…