ಬಹುಭಾಷಾ ನಟ ಪ್ರಕಾಶ್ ರೈ ನನಗೆ ಹೀಗೆ ನೆನಪಾದರು
ಆ ಕಡೆಯಿಂದ: ………… ’ನಾನು ಪ್ರಕಾಶ್ ರೈ ಮಾತಾಡ್ತಿರೋದು..’
ಈ ಕಡೆಯಿಂದ:……..‘ಕೇಳಿಸುತ್ತಿಲ್ಲ.. ಇನ್ನೊಮ್ಮೆ ಹೇಳಿ..’
‘ನಾನು ಪ್ರಕಾಶ್ ರೈ.. ಶ್ರೀಕಂಠ ಅವರಲ್ಲವಾ..’ –
ಅರೆ ಹೌದು ಪ್ರಕಾಶ್ ರೈ ವಾಯ್ಸ್.. ‘ಓಹೋ ಹೇಳಿ ಸರ್.. ಎಂಥ ಸರ್ಪ್ರೈಸ್ ಕೊಟ್ಟಿರಿ.. ನೀವು ಕರೆ ಮಾಡ್ತೀರಾ ಎಂದು ಊಹಿಸಿರಲಿಲ್ಲ. ಆಶ್ಚರ್ಯವಾಯಿತು’ ಎಂದು ಒಂದೇ ಉಸಿರಿಗೆ ಮಾತನಾಡಿದೆ.
****
ಹೀಗೆ ಒಮ್ಮೆ ಪ್ರಕಾಶ್ ರೈ ನನಗೆ ಕರೆ ಮಾಡಿ ಮಾತನಾಡಿದಾಗ, ಕ್ಷಣ ಥ್ರಿಲ್ ಆಗಿದ್ದೆ. ಅದು ಕರೆ ಮಾಡಿದ್ದಕ್ಕಲ್ಲ, ಒಂದು ಸಣ್ಣ ವಿಚಾರಕ್ಕೆ ದೊಡ್ಡ ಸ್ಟಾರ್ ನಟ ಇಷ್ಟು ಬೇಗ ಸ್ಪಂದಿಸಿದರಲ್ಲಾ ಎಂದು !
ಅಂದು ‘ನಾನು ನನ್ನ ಕನಸು’ ಚಿತ್ರ ನೋಡಿದ್ದೆ. ಚಿತ್ರಕಥೆ, ನವಿರಾದ ಸಂಭಾಷಣೆ, ಪಾತ್ರಗಳ ನಡುವಿನ ಭಾವನಾತ್ಮಕ ಸನ್ನಿವೇಶಗಳು, ಎಲ್ಲದಕ್ಕಿಂತ ಮುಖ್ಯವಾಗಿ ರೈ ನಟನೆ, ಅಚ್ಯುತಕುಮಾರ್ ಪಾತ್ರ.. ಎಲ್ಲವೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇಡೀ ದಿನ ಚಿತ್ರದ ಸನ್ನಿವೇಶಗಳನ್ನೇ ಮೆಲಕು ಹಾಕುತ್ತಿದ್ದಾಗ ಗೆಳೆಯ ವಿನೋದ್ ಕುಮಾರ್ ನಾಯಕ್ ಕರೆ ಮಾಡಿದ. ಅವನೊಟ್ಟಿಗೆ ‘ಹುಲಿ ಸಂರಕ್ಷಣಾ ಅಭಿಯಾನ’ದಲ್ಲಿ ರೈ ಪಾಲ್ಗೊಂಡಿದರ ಬಗ್ಗೆ ನೆನಪಿಸಿಕೊಳ್ಳುತ್ತಾ, ‘ನಾನು ನನ್ನ ಕನಸು’ ಸಿನಿಮಾ ಬಗ್ಗೆ ಪ್ರಶಂಸೆ ಮಾಡಿದೆ. ‘ರೈ’ ಗೊಂದು ‘ಅಭಿನಂದನೆ ತಿಳಿಸು ಗೆಳೆಯಾ’ ಎಂದು ವಿನೋದ್ಗೆ ಹೇಳಿದೆ. ಬಹುಶಃ ಈ ವಿಷಯವನ್ನು ವಿನೋದ್ ಅವರಿಗೆ ತಿಳಿಸಿರಬೇಕು ಅನ್ನಿಸುತ್ತೆ, ಈ ಮಾತುಕತೆಯ ಮಾರನೆಯ ದಿನವೇ ಪ್ರಕಾಶ್ ರೈ ನನಗೆ ಕರೆ ಮಾಡಿ, ಅಚ್ಚರಿ ಮೂಡಿಸಿದರು !
ಸಿನಿಮಾ ನನಗೆ ಪ್ಯಾಷನ್. ಆದರೆ, ಆ ಕ್ಷೇತ್ರದೊಟ್ಟಿಗಿನ ಸಂಪರ್ಕ ಕಡಿಮೆ. ಆದರೂ ರೈ ಕರೆ ಮಾಡಿದಾಗ ಸಹಜವಾಗಿ ಖುಷಿಯಾಯಿತು. ಅವರೊಂದಿಗೆ ಸಿನಿಮಾ ಕಥೆ, ನಮ್ಮ ಹುಡುಗ ಅಚ್ಯುತ ಕುಮಾರ್ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ರೈ ಕೂಡ ‘ಅಚ್ಯುತ ಅದ್ಭುತ ಪ್ರತಿಭೆ, ಕಲಾವಿದರು’ ಎಂದೆಲ್ಲ ಪ್ರಶಂಸಿದರು. ಎರಡೇ ನಿಮಿಷಕ್ಕೆ ಮುಗಿದ ಅವರ ಸಿನಿಮಾ ಮಾತು, ನಂತರ ಒಕ್ಕಲುತನದ ವಿಚಾರದತ್ತ ಹೊರಳಿತು.
‘ಹೈದರಾಬಾದ್ ಸಮೀಪ ತೋಟ ಮಾಡ್ತಿದ್ದೇನೆ. ನಿಮ್ಮಲ್ಲಿ ಒಳ್ಳೆಯ ದಾಳಿಂಬೆ ಸಸಿ ಸಿಗುತ್ತಂತೆ. ಚೆನ್ನಾಗಿರೋ ಸಸಿ ಕೊಡಿಸುತ್ತೀರಾ’ ಎಂದು ಕೇಳಿದರು ರೈ ! ಒಮ್ಮೆ ತೋಟಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ಆ ಮಾತು ಕೇಳಿ ತುಂಬಾ ಖುಷಿಯಾಯಿತು. ಅಲ್ಲಿವರೆಗೆ ರೈ ಅವರನ್ನು ಒಬ್ಬ ಪ್ರತಿಭಾವಂತ ನಟ, ಸಾಮಾಜಿಕ ಚಿಂತಕ ಮಾತ್ರ ಎಂದುಕೊಂಡಿದ್ದೆ. ಅವರ ಭೇಟಿಯ ನಂತರ ‘ಅವರಲ್ಲೊಬ್ಬ ಕೃಷಿಕನೂ ಇದ್ದಾನೆ’ ಎಂದು ಅರ್ಥವಾಯಿತು. ಅವರೊಟ್ಟಿಗಿನ ಸಂಭಾಷಣೆಯಿಂದ ಒಟ್ಟು ಅರ್ಥವಾಗಿದ್ದು, ಅವರು ಎಲ್ಲೇ ಮಾತನಾಡಿದರೂ ತುಂಬಾ ಗಂಭೀರವಾಗಿ, ಜಬಾಬ್ದಾರಿಯಾಗಿ, ಮಾತನಾಡುತ್ತಾರೆಂದು…!
Like this:
Like ಲೋಡ್ ಆಗುತ್ತಿದೆ...
Related
Published by
ಗಾಣಧಾಳು ಶ್ರೀಕಂಠ
ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ.
ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ.
ಪ್ರಕಟಿತ ಕೃತಿಗಳು :
ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ.
ಪ್ರಶಸ್ತಿ ಪುರಸ್ಕಾರ
೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ.
ಅಧ್ಯಯನ ಪ್ರವಾಸ :
ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.
ಗಾಣಧಾಳು ಶ್ರೀಕಂಠ ಅವರ ಎಲ್ಲಾ ಲೇಖನಗಳನ್ನು ನೋಡಿ