ಹೊಲದ ಕೃಷಿಹೊಂಡದಲ್ಲಿ ನೀರಿನ ಸೆಲೆ !


ನೀರಿನ ಸೆಲೆಯಿಂದ ತುಂಬಿಕೊಳ್ಳುತ್ತಿದ್ದ ತೆರೆದ ಬಾವಿಗಳು ಮಾಯವಾಗುತ್ತಿರುವ ಈ ಕಾಲದಲ್ಲಿ 3 ಮೀಟರ್ ಆಳದ ಕೃಷಿಹೊಂಡವೊಂದರಲ್ಲಿ ನೀರಿನ ಸೆಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ…!
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಕೆರೆಯ ನಾಗವೇಣಿ ಲೋಕನಾಥ್ ಎಂಬ ರೈತರ ಹೊಲದ ಕೃಷಿಹೊಂಡದಲ್ಲಿ ನೀರಿನಸೆಲೆ ಲಭ್ಯವಾಗಿದೆ. ಈ ಸಣ್ಣದಾದ ನೀರಿನ ಒರತೆಯಿಂದಾಗಿ ಒಂದೆರಡು ವಾರದಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಕೃಷಿಕ ಮಹಿಳೆ ನಾಗವೇಣಿ, ಕೃಷಿ ಚಟುವಟಿಕೆಗೆ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವಾಗಿ 20 ಮೀಟರ್ ಅಗಲ,20ಮೀಟರ್ ಉದ್ದ, 3 ಮೀಟರ್ ಆಳದ ಅಳತೆಯ ಕೃಷಿಹೊಂಡ ಮಾಡಿಸಿದ್ದಾರೆ. ಇಲಾಖೆಯ ಯೋಜನೆ­ಯೊಂದರಡಿ ₨ 1ಲಕ್ಷ ವೆಚ್ಚದಲ್ಲಿ ನಿರ್ಮಿಸಿ­ರುವ ಕೃಷಿಹೊಂಡದ ನಿರ್ಮಾಣ ಅಂತಿಮ ಹಂತ­ದಲ್ಲಿ­ದ್ದಾಗ, ಹೊಂಡದ ತುದಿಯಿಂದ ನೀರಿನ ಒರತೆ ಕಾಣಿಸಿಕೊಂಡಿದೆ. ಒಂದೆರಡು ವಾರಗಳಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ಒರತೆ ಕಂಡು, ನಾಗವೇಣಿ ಕುಟುಂಬ ಸಂಭ್ರಮಪಟ್ಟಿದೆ.

ನೀರಿನ ಸೆಲೆ ಹೇಗೆ?
ಹಿರಿಯೂರು ತಾಲ್ಲೂಕಿನ ಐಮಂಗಲ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ  200 ರಿಂದ 250 ಅಡಿಗೆ ಲಭ್ಯವಿದೆ. ಆದರೆ, ಆ ನೀರಿನಲ್ಲಿ 1500 ಪಿಪಿಎಂಗಿಂತ ಹೆಚ್ಚು ಲವಣಾಂಶಗಳಿದ್ದು, ಕುಡಿಯಲು ಯೋಗ್ಯವಿಲ್ಲ. ಇಂಥ ಪ್ರದೇಶದಲ್ಲಿ ತೆಗೆಸಿರುವ ಕೃಷಿಹೊಂಡದಲ್ಲಿ 10 ಮೀಟರ್‌ಗೆ ನೀರಿನ ಸೆಲೆ ಲಭ್ಯವಾಗಿದೆ. ಜತೆಗೆ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಜಲತಜ್ಞ ಎನ್.ದೇವರಾಜರೆಡ್ಡಿ ಖಚಿತಪಡಿಸುತ್ತಾರೆ. ‘ಈ ಭಾಗದ ಭೂಗರ್ಭದಲ್ಲಿರುವ ಶಿಥಿಲ (ಫೆದರ್‌ಝೋನ್) ವಲಯದಲ್ಲಿ ನೀರಿನ ಹರಿವಿನ ಪ್ರಮಾಣ ಉತ್ತಮವಾಗಿದೆ. ಇದೇ ಕಾರಣದಿಂದಾಗಿಯೇ ಇಷ್ಟು ಮೇಲ್ಭಾಗದಲ್ಲಿ ನೀರು ಲಭ್ಯವಾಗಿದೆ’ ಎಂದು ರೆಡ್ಡಿ ಅಭಿಪ್ರಾಯ­ಪಡುತ್ತಾರೆ.
‘ಕೃಷಿಹೊಂಡದ ಸಾಲಿನಲ್ಲಿರುವ (ಮೇಲ್ಭಾಗದಲ್ಲಿ) ಹೊಲದಲ್ಲಿ ಒಂದೆರಡು ಬಾವಿಗಳಿವೆ. ಬಾವಿ ಹಾಗೂ ಕೃಷಿ ಹೊಂಡ­ವಿರುವ ಜಾಗ ಇಳಿಜಾರಿನಲ್ಲಿದೆ. ಮಳೆ ನೀರು ಇದೇ ಜಾಡಿನಲ್ಲಿ ಹರಿಯುವಾಗ ಬಾವಿಗಳಲ್ಲಿ ಇಂಗಿರಬಹುದು. ಬಾವಿ ನೀರು ಬಳಸದಿರುವುರಿಂದ ಅಂತರ್ಜಲ ಹೆಚ್ಚಾಗಿ ಕೃಷಿ ಹೊಂಡದಲ್ಲಿ ಒರತೆ ಕಾಣಿಸಿಕೊಂಡಿ­ರ­ಬಹುದು ಎಂದು ನಾಗವೇಣಿ ಮತ್ತೊಂದು ರೀತಿ ಅಂದಾಜಿಸುತ್ತಾರೆ.

4 ಕಿ.ಮೀ ಕ್ಯಾಚ್‌ಮೆಂಟ್‌:
ನಾಲ್ಕು ಕಿ.ಮೀ ವ್ಯಾಪ್ತಿಯ ಹಳ್ಳಿಗಳ ನೀರು ನಾಗವೇಣಿಯವರ ಜಮೀನಿನ ಮೇಲೆ ಹರಿದು, ನಂತರ ಮುಂದಿ­ರುವ ಸಾಣಿಕೆರೆಗೆ ಸೇರುತ್ತಿತ್ತಂತೆ. ಹಾಗೆ ಹರಿಯುವ ನೀರು ಭೂಮಿಯಲ್ಲಿ ಇಂಗಿ, ಭೂಗರ್ಭದ ಶಿಥಿಲಪದರ­ದಲ್ಲಿ ಸಂಗ್ರಹವಾಗಿದೆ. ಇಳಿಜಾರಿಗೆ ಅಡ್ಡಲಾಗಿ ಕೃಷಿಹೊಂಡ ನಿರ್ಮಿಸಿರುವುದರಿಂದ, ನೀರಿನ ಸೆಲೆ ಕಾಣುತ್ತಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ತಜ್ಞರು ಹೀಗೆ ಹೇಳ್ತಾರೆ…
ಭೂಗರ್ಭದ ಶಿಥಿಲವಲಯದಲ್ಲಿ ನೀರಿನ ಪ್ರಮಾಣ ಉತ್ತಮವಾಗಿರುವುದೇ, ಹೊಂಡದಲ್ಲಿ ನೀರಿನ ಒರತೆ ಗೋಚರಿಸಲು ಸಾಧ್ಯವಾಗಿದೆ. ಜಮೀನಿನಲ್ಲಿ ಮಳೆ ನೀರು ಇಂಗಿದರೆ ಇಂಥ ಅಚ್ಚರಿಗಳು ಕಾಣಿಸಲು ಸಾಧ್ಯವಿದೆ.
– ಎನ್. ದೇವರಾಜರೆಡ್ಡಿ, ಜಲತಜ್ಞರು,
ಕೋಟ್‌…

ಕೊನೆ ಕ್ಷಣದಲ್ಲಿ ನೀರು ಕಂಡಿತು..

ಜೆಸಿಬಿಯಿಂದ ಮಣ್ಣು ತೆಗೆಸಿ, ಪ್ಲಾಸ್ಟಿಕ್ ಹೊದಿಸುವ ಹಂತದಲ್ಲಿದ್ದೆವು. ಆಗ ಹೊಂಡದ ಮೂಲೆಯಿಂದ ಒರತೆ ಕಾಣಿಸಿಕೊಂಡಿತು. ಈಗ ಹೊಂಡದಲ್ಲಿ ಮೊಳಕಾಲುದ್ದ ನೀರು ಸಂಗ್ರಹವಾಗಿದೆ.
– ನಾಗವೇಣಿ ಲೋಕನಾಥ್, ವದ್ದೀಕೆರೆ

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s